PLACE YOUR AD HERE AT LOWEST PRICE
ಕೆಜಿಎಫ್:ತಾಲ್ಲೂಕಿನ ಎನ್.ಜಿ ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಕಟ್ಟಡ ಕಾಮಗಾರಿಗೆ ಬಳಸಿಕೊಂಡಿರುವ ಬಗ್ಗೆ ವಿಡಿಯೋ ವೈರಲ್ ಆಗಿದ್ದು, ತಪ್ಪಿತಸ್ಥರ ಮೇಲೆ ಕ್ರಮಕ್ಕೆ ದಲಿತ ಮುಖಂಡರು ಆಗ್ರಹಿಸಿದ್ದಾರೆ.
ಮಾ.೨೧ ಗುರುವಾರ ಮದ್ಯಾಹ್ನ ೨.೩೦ರ ಸಮಯದಲ್ಲಿ ಮಕ್ಕಳು ಶಾಲೆಯ ಕಾಂಪೌಂಡ್ ಕಾಮಗಾರಿಗೆ ಪೈಪ್ ಮೂಲಕ ನೀರನ್ನು ಹಾಯಿಸುತ್ತಿದ್ದು, ಅಲ್ಲಿ ವಿಡಿಯೋ ಚಿತ್ರೀಕರಿಸಿದ ಯುವಕ ಮಕ್ಕಳನ್ನು ಪ್ರಶ್ನಿಸಿದ ತಕ್ಷಣ ಅಲ್ಲಿ ಪೈಪ್ ಬಿಸಾಡಿ ಓಡಿ ಹೋಗುವುದು ವಿಡಿಯೋದಲ್ಲಿ ತಿಳಿಯುತ್ತದೆ.
ನಂತರ ಕೆಲವೇ ಕ್ಷಣಗಳಲ್ಲಿ ಕಸವನ್ನು ಸಹ ಬುಟ್ಟಿಗಳಲ್ಲಿ ತಂದು ಕಸದ ರಾಶಿಯಲ್ಲಿ ಸುರಿದು ಪರಾರಿಯಾಗುತ್ತಾರೆ. ಮಕ್ಕಳನ್ನು ಕೂಲಿಕಾರ್ಮಿಕರನ್ನಾಗಿ ಬಳಸಿಕೊಳ್ಳುತ್ತಿರುವ ಶಾಲೆಯ ಶಿಕ್ಷಕರ ವಿರುದ್ಧ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ದಲಿತ ಮುಖಂಡರು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಪದೇ ಪದೇ ಮರುಕಳುಹಿಸುತ್ತಿರುವ ಘಟನೆಗಳು
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಮಲ ಗುಂಡಿ ಸ್ವಚ್ಛಗೊಳಿಸಲು ಬಳಸಿಕೊಂಡಿರುವ ಬಗ್ಗೆ ರಾಜ್ಯಮಟ್ಟದಲ್ಲಿ ಸುದ್ಧಿಯಾಗಿ ಅವರ ವಿರುದ್ಧ ಕಾನೂನು ಅಡಿಯಲ್ಲಿ ಕ್ರಮಗೊಳ್ಳಲಾಗಿದೆ.
ಕೋಲಾರ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಸಹ ಕಟ್ಟಡ ಕಾಮಗಾರಿಗೆ ಮಕ್ಕಳನ್ನು ಬಳಸಿಕೊಂಡಿರುವ ಘಟನೆ ಮಾಸುವ ಮುನ್ನವೇ ಎನ್.ಜಿ ಹುಲ್ಕೂರು ವಿವೇಕಾನಂದ ಶಾಲೆಯಲ್ಲಿ ಮಕ್ಕಳನ್ನು ಕಟ್ಟಡ ಕಾಮಗಾರಿಗೆ ನೀರನ್ನು ಹಾಯಿಸಲು ಬಳಸಿಕೊಂಡಿರುವುದು ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ.
ಈ ಕೂಡಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಮಗ್ರವಾಗಿ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕೆಂದು ದಲಿತ ಮುಖಂಡರು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳನ್ನು ಕಟ್ಟಡ ಕಾಮಗಾರಿಗೆ ಬಳಸಿಕೊಳ್ಳಲಾಗಿದೆ ಎಂಬ ವಿಡಿಯೋ ವೈರಲ್ ಆಗಿದ್ದು, ಇಡೀ ಸಮಾಜ ತಲೆ ತಗ್ಗಿಸುವಂತಾಗಿದೆ. ಜಿಲ್ಲೆಯಲ್ಲಿ ಪದೇ ಪದೇ ಜೀತದಾಳುಗಳಂತೆ ಮಕ್ಕಳನ್ನು ಮಲಗುಂಡಿ ಸ್ವಚ್ಛತೆ, ಕಟ್ಟಡ ಕಾಮಗಾರಿ, ನೀರು ಹಾಯಿಸಲು ಕಾರ್ಮಿಕರನ್ನಾಗಿ ಬಳಸಕೊಳ್ಳುತ್ತಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಡಾ.ಅಂಬೇಡ್ಕರ್ ಯುವ ವೇದಿಕೆ ಸಂಸ್ಥಾಪಕ ಜೈ ಭೀಮ್ ಶ್ರೀನಿವಾಸ್ ಒತ್ತಾಯಿಸಿದ್ದಾರೆ.