PLACE YOUR AD HERE AT LOWEST PRICE
ಬೆಂಗಳೂರು:ತಮಿಳುನಾಡಿಗೆ ಕಾವೇರಿ ಹರಿದು ಹೋಗುತ್ತಿದ್ದರೆ ಕರ್ನಾಟಕದ ಜಲಾಶಯಗಳು ಖಾಲಿ ಆಗುತ್ತಿವೆ. ಈ ಸಂದರ್ಭದಲ್ಲಿ, ತಮಿಳುನಾಡಿಗೆ ಹೆಚ್ಚು ನೀರು ಬಿಡಬೇಕು ಎಂಬ ಆಘಾತವು ಎದುರಾಗಿದೆ. ಆದರೆ ಈ ವಿಚಾರ ಮತ್ತೆ ರಾಜಕೀಯ ದಾಳವಾಗಿದ್ದು ಬಿಜೆಪಿ & ಜೆಡಿಎಸ್ ವಿರುದ್ಧ ಕಾಂಗ್ರೆಸ್ ರೊಚ್ಚಿಗೆದ್ದಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಕಮಲ ಪಾಳಯದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ನ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ, ವಿರೋಧ ಪಕ್ಷಗಳ ನಿಲುವಿನ ಬಗ್ಗೆ ಅಕ್ರೋಶ ಹೊರಹಾಕಿದ್ದಾರೆ. ಈಗ ತಮ್ಮ ರಾಜೀನಾಮೆ ಕೇಳುತ್ತಿರುವ ವಿರೋಧ ಪಕ್ಷಗಳ ನಾಯಕರು ಸರ್ವ ಪಕ್ಷ ಸಭೆಯಲ್ಲಿ ಹಾಗೆ ಹೇಳಲಿಲ್ಲ ಏಕೆ? ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ. ಹಾಗೇ ಬೆಂಗಳೂರು ಬಂದ್ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದಾರೆ.
ಬೆಂಗಳೂರು ಬಂದ್ ಬಗ್ಗೆ ಸಿಎಂ ಹೇಳಿದ್ದೇನು?
ಇನ್ನು ನಾಳೆ ನಡೆಯಲಿರುವ ಬೆಂಗಳೂರು ಬಂದ್ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಇದೇ ವೇಳೆ ಮಾತನಾಡಿದ್ದು, ಕಾವೇರಿ ನೀರು ವಿವಾದ ಸಂಬಂಧ ನಾಳೆ ಬೆಂಗಳೂರು ಬಂದ್ ಮತ್ತು ನಾಡಿದ್ದು ಕರ್ನಾಟಕ ಬಂದ್ಗೆ ಕರೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಗೆ ಅವಕಾಶವಿದೆ. ಅದನ್ನ ನಾವು ಹತ್ತಿಕ್ಕಲು ಹೋಗುವುದಿಲ್ಲ ಎಂದು ಸಿಎಂ ಇದೇ ವೇಳೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಮೂಲಕ ಬಂದ್ಗೆ ಸರ್ಕಾರ ಅಡ್ಡಿಯನ್ನು ಮಾಡುವುದಿಲ್ಲ ಎಂದಿದ್ದಾರೆ. ಹಾಗೇ ಇನ್ನೊಂದು ಕಡೆ ಬಂದ್ ವೇಳೆ ಅಹಿತಕ ಘಟನೆಗಳು ನಡೆಯದಂತೆ ಭದ್ರತೆ ಕೈಗೊಳ್ಳಲಾಗಿದೆ.
ಕಾವೇರಿ ನೀರು ಹರಿಸುವ ಕುರಿತು ಸರ್ವೋಚ್ಚ ನ್ಯಾಯಾಲಯದ ಆದೇಶ ಇದೆ. ನೀರು ಹರಿಸಲು ಸಾಧ್ಯವಿಲ್ಲ ಎಂದು ವಾದ ಮಂಡಿಸಲಾಗಿದೆ. ನಮ್ಮ ಅರ್ಜಿ ವಜಾ ಆಗಿದ್ದು, ಕಾವೇರಿ ನೀರು ನಿಯಂತ್ರಣ ಸಮಿತಿ & ನಿರ್ವಹಣಾ ಪ್ರಾಧಿಕಾರ ಸೇರಿ ಈ ಎರಡರ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದೆವು. ಸುಪ್ರೀಂ ನಮ್ಮ ಹಾಗೂ ತಮಿಳುನಾಡಿನ ಅರ್ಜಿ ತಿರಸ್ಕಾರ ಮಾಡಿದೆ ಎಂದರು. ಅಲ್ಲದೆ ಕರ್ನಾಟಕದ ಮುಂದಿನ ಕಾನೂನು ಹೋರಾಟದ ಬಗ್ಗೆಯೂ ಸಿಎಂ ತಿಳಿಸಿದರು.
ತಮಿಳುನಾಡು 24,000 ಕ್ಯೂಸೆಕ್ ನೀರು ಕೇಳಿತ್ತು, ನಂತರ 7200 ಕ್ಯೂಸೆಕ್ ಕೇಳಿತ್ತು. ನಾವು 5000 ಕ್ಯೂಸೆಕ್ಸ್ ನೀರು ಕೂಡ ಕೊಡಲಾಗುವುದಿಲ್ಲ ನಮ್ಮ ಹತ್ತಿರ ನೀರಿಲ್ಲ ಎಂದು ವಾದಿಸಿದ್ರೂ ಅದನ್ನ ನ್ಯಾಯಾಲಯ ಒಪ್ಪಿಲ್ಲ. ಪುನಃ ಸೆಪ್ಟೆಂಬರ್ 26 ರಂದು ಸರ್ವೋಚ್ಚ ನ್ಯಾಯಾಲಯದ ಎದುರು ಈ ಅರ್ಜಿ ವಿಚಾರಣೆಗೆ ಬರಲಿದೆ. ನಮ್ಮ ವಾದ ಇನ್ನಷ್ಟು ಬಲವಾಗಿ ಮಂಡಿಸುತ್ತೇವೆ ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಒಟ್ನಲ್ಲಿ ಕಳೆದ ವರ್ಷ ಅಂದ್ರೆ 2022ರ ಮಳೆಗಾಲದಲ್ಲಿ ತಮಿಳುನಾಡಿನ ಡ್ಯಾಂಗೆ ಹರಿದಿದ್ದ 400 ಟಿಎಂಸಿಗೂ ಹೆಚ್ಚು ಕಾವೇರಿ ನದಿ ನೀರು ಸಮುದ್ರಕ್ಕೆ ಸೇರಿದೆ. ಮುಂಗಾರು ಮಳೆ ಅಬ್ಬರ ಕಾರಣ ಮೆಟ್ಟೂರು ಡ್ಯಾಂನಿಂದ 472 ಟಿಎಂಸಿ ಹೆಚ್ಚು ನೀರನ್ನ ಹೊರಬಿಡಲಾಗಿತ್ತು. ಹೀಗೆ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ತಮಿಳುನಾಡು ಮೂಲಕ ಸಮುದ್ರ ಸೇರಿದೆ. ಇಷ್ಟೊಂದು ನೀರನ್ನ ವ್ಯರ್ಥ ಮಾಡಿದ್ದರೂ ಈ ವರ್ಷ ಮತ್ತೆ ನೀರಿಗೋಸ್ಕರ ತಮಿಳುನಾಡು ಕಿರಿಕ್ ಶುರುಮಾಡಿದ್ದು, ಕನ್ನಡಿಗರು ರೊಚ್ಚಿಗೆದ್ದು ಪ್ರತಿಭಟನೆ ಶುರು ಮಾಡಿದ್ದಾರೆ. ಅಲ್ಲದೆ ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕ ಬಂದ್ಗೆ ಸಿದ್ಧತೆ ನಡೆದಿದೆ.