PLACE YOUR AD HERE AT LOWEST PRICE
ಕೆಜಿಎಫ್:ಕರ್ನಾಟಕ-ಆಂದ್ರ ಗಡಿ ಭಾಗದಲ್ಲಿ ತೆಲುಗು ಭಾಷೆಯ ಪ್ರಭಾವವನ್ನು ಕಡಿಮೆಗೊಳಿಸಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಅದ್ಯ ಕರ್ತವ್ಯವಾಗಿದೆ ಎಂದು ಗ್ರಾಪಂ ಅಧ್ಯಕ್ಷ ವಿನೂ ಕಾರ್ತಿಕ್ ಹೇಳಿದರು.
ಬೇತಮಂಗಲ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಗ್ರಾಪಂ ಆಡಳಿತ ಮಂಡಳಿ, ಶ್ರೀ ಭುವನೇಶ್ವರಿ ಕನ್ನಡ ಸಂಘ, ಸರ್ಕಾರಿ ಹಾಗೂ ಖಾಸಗಿ ವಿದ್ಯಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಾಲ್ಲೂಕಿನ ಗಡಿ ಭಾಗದಲ್ಲಿ ಕನ್ನಡ ಭಾಷೆಯ ಹಾಗೂ ಕನ್ನಡ ಪರ ಕಾರ್ಯಕ್ರಮಗಳನ್ನು ಹೆಚ್ಚಿನ ರೀತಿಯಲ್ಲಿ ಹಮ್ಮಿಕೊಂಡು ಇಂದಿನ ಕಾಲದ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಇತಿಹಾಸವನ್ನು ತಿಳಿಸಿಕೊಂಡಬೇಕಿದೆ ಎಂದರು.
ಬೇತಮಂಗಲ ಭಾಗದಲ್ಲಿ ಕನ್ನಡ ಪರ ಯಾವುದೇ ಕಾರ್ಯಕ್ರಮಗಳಿಗೂ ಸಂಪೂರ್ಣ ಸಹಕಾರ ನೀಡಲಾಗುತ್ತದೆ, ಮುಂದಿನ ದಿನಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಿಸೋಣ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಗೋಪಾಲ್ ಗೌಡ ಮಾತನಾಡಿ, ಮೈಸೂರು ರಾಜ್ಯವನ್ನು ದೇವರಾಜು ಅರಸು ಅವರ ಆಡಳಿತ ಅವಧಿಯಲ್ಲಿ ಕರ್ನಾಟಕ ರಾಜ್ಯವೆಂದು ಮರು ನಾಮಕರಣ ಮಾಡಿದರು. ಅನೇಕ ಮಹನೀಯರ ಹೋರಾಟ ಹಾಗೂ ಪ್ರಾಣ ತ್ಯಾಗದ ಫಲವಾಗಿ ಕರ್ನಾಟಕ ರಾಜ್ಯವು ನಾಮಕರಣವಾಗಿದೆ ಎಂದು ಇತಿಹಾಸ ನೆನಪಿಸಿದರು.
ಕನ್ನಡ ಉಪನ್ಯಾಸಕ ವೇದಿಕೆ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿನ ಕನ್ನಡ ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಶಿಕ್ಷಣದ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕಿದೆ. ವಿದ್ಯಾರ್ಥಿಗಳು ಪ್ರತಿನಿತ್ಯ ಕನ್ನಡ ದಿನ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದರಿಂದ ಕನ್ನಡ ಭಾಷೆಯನ್ನು ಕಲಿಯಬಹುದು ಹಾಗೂ ಸಾಮಾನ್ಯ ಜ್ಞಾನವು ಸಹ ಹೆಚ್ಚುತ್ತದೆ ಎಂದರು.
ಕೆಜಿಎಫ್ ತಾಲ್ಲೂಕು ಅಧ್ಯಕ್ಷ ಶ್ರೀ ಹರೀ ಮಾತನಾಡಿ, ಕೆಜಿಎಫ್ ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಭಾಷೆಯ ಮೇಲಿನ ಪ್ರೀತಿಯನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸುವ ದೃಷ್ಠಿಯಿಂದ ಅನೇಕ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಬಸ್ ನಿಲ್ಧಾಣದಲ್ಲಿ ಧ್ವಜಾರೋಹಣ
ಸರ್ಕಾರಿ ಕನ್ನಡ ಮಾದರಿ ಶಾಲೆಯ ಮುಂಭಾಗದಲ್ಲಿ ಅನೇಕ ಗಣ್ಯರಿಂದ ಬೆಳ್ಳಿ ಪಲ್ಲಕ್ಕಿಗೆ ಚಾಲನೆ ನೀಡಿ ಹಳೆ ಬಡಾವಣೆಯ ಮೂಲಕ ಬಸ್ ನಿಲ್ಧಾಣಕ್ಕೆ ಬಂದು ಬಸ್ ನಿಲ್ಧಾಣದಲ್ಲಿ ಧ್ವಜಾರೋಹಣ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ತೆರಳಲಾಯಿತು.
ಕನ್ನಡ ರಾಜ್ಯೋತ್ಸವ ಮೆರವಣಿಗೆ ಹಾಗೂ ಕಾರ್ಯಕ್ರಮದಲ್ಲಿ ಬೇತಮಂಗಲದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಖಾಸಗಿ ಶಾಲೆಯ ವಿದ್ಯಾರ್ಥಿಗಳು, ಶ್ರೀ ಸಾಯಿ ಪಿಯು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಸಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡುವ ಮೂಲಕ ಸಂಭ್ರಮಿಸಿದರು.
ಹೊಸ ಬಡಾವಣೆಯ ಗ್ರಾಪಂ ಸದಸ್ಯರು ಬೇಸರ
ಬೇತಮಂಗಲದಲ್ಲಿ ನಡೆಯುವಂತಹ ಯಾವುದೇ ದೇವತ ಕಾರ್ಯಕ್ರಮಗಳು ಹಾಗೂ ಜಯಂತಿಗಳ ಆಚರಣೆಯ ಪಲ್ಲಕ್ಕಿಗಳು ಹಳೆ ಬಡಾವಣೆ ಹಾಗೂ ಹೊಸ ಬಡಾವಣೆಯಲ್ಲಿ ಮೆರವಣಿಗೆ ಮಾಡುವುದು ಇಲ್ಲಿನ ಸಂಪ್ರದಾಯವಾಗಿದೆ, ಅದರೆ ಈ ಭಾರಿಯ ಕನ್ನಡ ರಾಜ್ಯೋತ್ಸವವು ಕೇವಲ ಹಳೆ ಬಡಾವಣೆಯಲ್ಲಿ ಮಾತ್ರ ಮೆರವಣಿಗೆ ಮಾಡಿ ಆಚರಣೆ ಮಾಡಿರುವುದು ಹೊಸ ಬಡಾವಣೆಯ ಗ್ರಾಪಂ ಸದಸ್ಯರು ಹಾಗೂ ಮುಖಂಡರು, ಕನ್ನಡ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದರು.
ಪ್ರಥಮ ಕನ್ನಡ ರಾಜ್ಯೋತ್ಸವ ಆಚರಣೆಯ ತಂಡ ಮೂಲೆ ಗುಂಪು
ಗಡಿ ಭಾಗವಾದ ಬೇತಮಂಗಲದಲ್ಲಿ ೧೯೭೩ರಲ್ಲಿ ಕರ್ನಾಟಕ ಎಂದು ನಾಮಕರಣಗೊಂಡ ಪ್ರಥಮ ಬಾರಿಗೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ ತಂಡದ ಮುಖ್ಯಸ್ಥರಾದ ಅ.ಮು.ಲಕ್ಷ್ಮೀನಾರಾಯಣ್, ಡಾ.ಕೃಷ್ಣಮೂರ್ತಿ, ಜಗದೀಶ್, ಕೃಷ್ಣಪ್ಪ, ನಾಗರಾಜ್ ಒಳಗೊಂಡಂತೆ ಹಲವರನ್ನು ಕನ್ನಡ ರಾಜ್ಯೋತ್ಸವಕ್ಕೆ ಆಹ್ವಾನವು ನೀಡದ ಮೂಲೆ ಗುಂಪು ಮಾಡಿದ್ದಾರೆಂದು ಅಸಮದಾನ ವ್ಯಕ್ತ ಪಡಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷರಾದ ಅಲುವೇಲಮ್ಮ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಕಾರ್ಯದರ್ಶಿ ವೆಂಕಟೇಶ್, ರೈತ ಸಂಘದ ಮುಖಂಡ ಹುಲ್ಕೂರು ಹರೀ, ಕೋದಂಡರಾಮಯ್ಯ, ಕರಗ ನಾಗರಾಜ್, ವೆಂಕಟರವಣ, ಶ್ರೀನಿವಾಸ್ ಮೂರ್ತಿ, ಪಿಎಸೈ ಸತೀಶ್, ರಾಮಚಂದ್ರಪ್ಪ ಸೇರಿದಂತೆ ಗ್ರಾಪಂ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.