PLACE YOUR AD HERE AT LOWEST PRICE
ಬಂಗಾರಪೇಟೆ:ಯುವ ವಕೀಲರು ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯ ಒದಗಿಸುವ ಮೂಲಕ ಮಾದರಿ ವಕೀಲರಾಗಿ ಇತರರಿಗ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವ ಮೂಲಕ ನ್ಯಾಯಾಂಗದ ಮೇಲೆ ಜನರಿಗೆ ಮತ್ತಷ್ಟು ನಂಬಿಕೆ ಹೆಚ್ಚಿಸಬೇಕೆಂದು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಲೆ ಹೇಳಿದರು.
ಪಟ್ಟಣದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ನಿರ್ಮಾಣವಾಗಿರುವ ವಾಹನಗಳ ನಿಲುಗಡೆ ಹಾಗೂ ನ್ಯಾಯಾಲಯದ ಒಳಗೆ ಲಿಪ್ಟ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು.ನಮ್ಮ ಬಳಿ ವಿವಿಧ ಧಾವೆಗಳಲ್ಲಿ ನ್ಯಾಯಕ್ಕಾಗಿ ಬರುವ ಸಾರ್ವಜನಿಕರಿಗೆ ವಕೀಲರು ವಿನಾಕಾರಣ ಅಲೆಸದೆ ತ್ವರಿತವಾಗಿ ಅವರಿಗೆ ನ್ಯಾಯದೊರಕಿಸಿಕೊಡಬೇಕು.
ಈಗಾಗಲೇ ನ್ಯಾಯಾಲಯ ಎಂದರೆ ಜನರಲ್ಲಿ ಮತ್ತೊಂದು ಭಾವನೆ ಇದೆ ಅದನ್ನು ಹೊಗಲಾಡಿಸಬೇಕು ಹಾಗೂ ವಕೀಲರು ಎಲ್ಲಾ ಗ್ರಾಮಗಳಿಗೆ ತೆರಳಿ ಕಾನೂನು ಅರಿವು ನೆರವು ಬಗ್ಗೆ ಜಾಗೃತಿ ಮೂಡಿಸಬೇಕೆಂದು ಹೇಳಿದರು.
ಸ್ಥಳಿಯ ನ್ಯಾಯಾಲಯ ಹೈಕೋರ್ಟ್ ಮಾದರಿ ಇದ್ದು ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ, ಯುವ ವಕೀಲರು ಹೆಚ್ಚಾಗಿದ್ದು,ನ್ಯಾಯಕ್ಕಾಗಿ ಬರುವವರಿಗೆ ದಾರಿ ತಪ್ಪಿಸುವ ಕೆಲಸ ಮಾಡದೆ ಇತರೆ ವಕೀಲರಿಗೆ ಮಾದರಿಯಗುವಂತೆ ಕಾರ್ಯನಿರ್ವಹಿಸಬೇಕು ಎಂದರು.
ಇನ್ನೂ ಅನೇಕರಿಗೆ ಕಾನೂನು ಬಗ್ಗೆ ಅರಿವಿಲ್ಲದೆ ಹಾಗೂ ತ್ವರಿತವಾಗಿ ನ್ಯಾಯ ಸಿಗದೆ ಶೋಷಣೆಗೆ ತುತ್ತಾಗುತ್ತಿದ್ದಾರೆ, ಅಂತಹ ಜನರಿಗೆ ಕಾನೂನು ಬಗ್ಗೆ ಅರಿವು ನೆರವು ಮೂಡಿಸಬೇಕು.
ಹಣಗಳಿಸುವುದೊಂದೇ ವಕೀಲರಿಗೆ ವೃತ್ತಿಯಾಗದೆ ಜೊತೆಗೆ ತಮ್ಮನ್ನು ನಂಬಿ ಬರುವ ಕಕ್ಷಿದಾರರಿಗೆ ಸಮಯಕ್ಕೆ ಸರಿಯಾಗಿ ನ್ಯಾಯ ಸಿಗುವಂತೆ ಮಾಡಿದರೆ ಅದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ ಎಂದರು.
ಇದೇ ವೇಳೆ ವಕೀಲರ ಸಂಘದಿಂದ ಇಲ್ಲಿನ ನ್ಯಾಯಾಲಯದಲ್ಲಿ ಖಾಯಂ ಹಿರಿಯ ಸಿವಿಲ್ ನ್ಯಾಯಾಧೀಶರಿಲ್ಲದೆ ಪ್ರಕರಣಗಳ ತ್ವರಿತ ವಿಲೇವಾರಿಗೆ ತೊಂದರೆಯಾಗಿದ್ದು ಖಾಯಂ ನ್ಯಾಯಾಧೀಶರನ್ನು ನೇಮಿಸಬೇಕೆಂದು ಮನವಿ ಮಾಡಿದರು.
ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಹಾಗೂ ಹಿರಿಯ ನ್ಯಾ. ಬಿ.ವೀರಪ್ಪ,ಮೊಹಮ್ಮದ್ ನವಾಜ್, ಕೆ.ಎಸ್.ಭರತ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಕುಸುಮಾ ಸಂತೋಷ್, ಉಪಾಧ್ಯಕ್ಷ ಮನ್ಸೂರ್ ಹುಸೇನ್, ಕಾರ್ಯದರ್ಶಿ ಎಂ.ಆನಂದ್, ಹಿರಿಯ ವಕೀಲರಾದ ಅಮರೇಶ್, ಪ್ರಸಾದ್ ಮತ್ತಿತರರು ಇದ್ದರು.