• Thu. May 2nd, 2024

ಸಂಕ್ರಾಂತಿ ಗೆಲುವು ಯಾರದು? ವೀರಸಿಂಹಾರೆಡ್ಡಿ ಬಾಲಕೃಷ್ಣ – ವಾಲ್ತೇರ್ ವೀರಯ್ಯ ಚಿರಂಜೀವಿ

PLACE YOUR AD HERE AT LOWEST PRICE

ಮೆಗಾಸ್ಟಾರ್ ಚಿರಂಜೀವಿ, ಮಾಸ್ ಸಾಮ್ರಾಟ ನಂದಮೂರಿ ಬಾಲಕೃಷ್ಣ ಈ ಹೆಸರುಗಳೇ ಕೋಟ್ಯಾಂತರ ಅಭಿಮಾನಿಗಳಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ತೆಲುಗಿನ ಈ ಇಬ್ಬರೂ ಪೋಟಿ ಪೈಪೋಟಿಯಲ್ಲಿ ಎತ್ತಿದ ಕೈ. ತಮ್ಮ ಅಭಿಮಾನಿ ವರ್ಗವನ್ನು ರಂಜಿಸಲು ಇಳಿವಯಸ್ಸಿನಲ್ಲಿಯೂ ಎಂತದ್ದೇ ರಿಸ್ಕ್ ತೆಗೆದುಕೊಳ್ಳಲು ಇವರು ಸಿದ್ಧ.

ಸಂಕ್ರಾಂತಿ ದಕ್ಷಿಣ ಭಾರತ ಪ್ರಸಿದ್ಧ ನಟರ ಚಿತ್ರಗಳ ಬಿಡುಗಡೆಗೆ ವೇದಿಕೆಯಾಗುತ್ತದೆ. ೨೦೨೩ ರ ಸಂಕ್ರಾಂತಿ ತೆಲುಗಿನ ಈ ಇಬ್ಬರೂ ಮಹಾನ್ ನಟರ ಅಭಿಮಾನಿಗಳ ಪಾಲಿಗೆ ಭರ್ಜರಿ ಧಮಾಕ. ರಸದೌತಣ.

ಬಾಲಕೃಷ್ಣ ನಟಿಸಿರುವ ವೀರಸಿಂಹಾರೆಡ್ಡಿ ಮತ್ತು ಚಿರಂಜೀವಿ ನಟಿಸಿರುವ ವಾಲ್ತೇರ್ ವೀರಯ್ಯ ಮುಖಾಮುಖಿ ಬಿಡುಗಡೆಯಾಗುತ್ತಿದೆ.ಬಾಲಕೃಷ್ಣ ನಟನೆಯ ವೀರಸಿಂಹಾರೆಡ್ಡಿ ಜನವರಿ೧೨ ರಂದು ಬಿಡುಗಡೆಯಾದರೆ, ಒಂದು ದಿನದ ನಂತರ ಜ.೧೩ ಕ್ಕೆ ಚಿರಂಜೀವಿ ನಟಿಸಿರುವ ವಾಲ್ತೇರ್ ವೀರಯ್ಯ ಬಿಡುಗಡೆಯಾಗುತ್ತಿದೆ.

ಸಂಕ್ರಾಂತಿ ಹಬ್ಬಕ್ಕೆ ಒಂದೆರೆಡು ದಿನ ಮುಂಚಿತವಾಗಿಯೇ ಇವರ ಅಭಿಮಾನಿ ವರ್ಗದಲ್ಲಿ ಹಬ್ಬದ ಸಡಗರ ಸಂಭ್ರಮವನ್ನು ಹೆಚ್ಚಿಸುತ್ತಿದೆ. ಎದೆಬಡಿತ ಜೋರಾಗಿಸುತ್ತಿದೆ. ಅಭಿಮಾನಿಗಳು ಈಗಿನಿಂದಲೇ ತಮ್ಮ ನೆಚ್ಚಿನ ಅಭಿಮಾನದ ನಟರ ಚಿತ್ರಗಳನ್ನು ಅದ್ದೂರಿಯಾಗಿ ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ.

ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳು ಹಿಂದಿನಿಂದಲೂ ತೆಲುಗು ಚಿತ್ರಗಳ ಪ್ರಮುಖ ಕೇಂದ್ರಗಳಾಗಿವೆ. ಬಾಲಕೃಷ್ಣ ಚಿರಂಜೀವಿಯನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಅರಾಧಿಸುವ ದೊಡ್ಡ ಅಭಿಮಾನಿ ವರ್ಗ ಈ ಜಿಲ್ಲೆಗಳಲ್ಲಿದೆ.

ಚಿತ್ರ ಪ್ರದರ್ಶಕರು, ಚಿತ್ರಮಂದಿರ ಮಾಲೀಕರು ತೆಲುಗು ಚಿತ್ರಗಳನ್ನು ಅದರಲ್ಲೂ ಚಿರಂಜೀವಿ, ಬಾಲಕೃಷ್ಣ ಅಭಿನಯದ ಚಿತ್ರಗಳನ್ನು ಪೈಪೋಟಿ ಮೇಲೆ ಹೆಚ್ಚಿನ ಮೊತ್ತಕ್ಕೆ ಖರೀದಿಸಿ ತಂದು ಪ್ರದರ್ಶಿಸುತ್ತಾರೆ. ಹಾಗೆಯೇ ಟಿಕೆಟ್ ದರವನ್ನು ಹೆಚ್ಚಿಸುತ್ತಾರೆ. ಆದರೆ, ಈ ನಟರ ಅಭಿಮಾನಿ ವರ್ಗಕ್ಕೆ ಇದ್ಯಾವುದು ದೊಡ್ಡದೆನಿಸುವುದಿಲ್ಲ. ಅಭಿಮಾನಕ್ಕೆ ಅಡ್ಡಿಯೂ ಅಲ್ಲ.

ಚಿತ್ರ ಬಿಡುಗಡೆಯಾದ ಒಂದೆರೆಡು ವಾರಗಳ ಕಾಲ ಚಿತ್ರಮಂದಿರಗಳು ತುಂಬಿ ತುಳುಕುತ್ತಿರುತ್ತವೆ. ಪ್ರಪಂಚದ ಯಾವುದೇ ಆಗುಹೋಗುಗಳು ಮುಖ್ಯವಲ್ಲ ಎಂಬಂತೆ ಈ ಇಬ್ಬರೂ ನಟರ ಅಭಿಮಾನಿಗಳು ತಮ್ಮ ಅಭಿಮಾನದ ನಟನ ಚಿತ್ರಗಳ ಕುರಿತೇ ಚರ್ಚಿಸುತ್ತಾರೆ. ಆನಂದಿಸುತ್ತಾರೆ. ಅಸ್ವಾದಿಸುತ್ತಾರೆ.

ಚಿರಂಜೀವಿ, ಬಾಲಕೃಷ್ಣ ತಮ್ಮ ಸಿನಿಮಾ ಜೀವಿತಾವಽಯಲ್ಲಿ ಸಂಕ್ರಾಂತಿಯಂದು ಅನೇಕ ಬಾರಿ ಪೈಪೋಟಿ ಎದುರಿಸಿದ್ದಾರೆ. ಯಾರ ಚಿತ್ರ ಪೈಪೋಟಿಯಲ್ಲಿ ಗೆಲ್ಲುತ್ತದೆ ಎನ್ನುವುದರ ಕುರಿತು ಯಾವುದೇ ಸಾರ್ವತ್ರಿಕ ಚುನಾವಣಾ ಫಲಿತಾಂಶಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ವಿಮರ್ಶೆ ವ್ಯಾಖ್ಯಾನಗಳು ಅಭಿಮಾನಿಗಳ ನಡುವೆ ನಡೆಯುತ್ತದೆ. ಕೆಲವೊಮ್ಮೆ ಅತಿರೇಕಕ್ಕೆ ಹೋಗುವುದು ಇದೆ. ಕೊಲೆ, ಗಲಾಟೆಗೂ ಕಾರಣವಾಗಿರುವ ಇತಿಹಾಸ ಕೋಲಾರ ಜಿಲ್ಲೆಯಲ್ಲಿಯೇ ಇದೆ.

ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಈ ಎರಡೂ ಚಿತ್ರಗಳನ್ನು ನಿರ್ಮಿಸಿರುವುದು ವಿಶೇಷ. ಈ ಎರಡೂ ಚಿತ್ರಗಳಲ್ಲಿ ಶ್ರುತಿಹಾಸನ್ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ವಾಲ್ತೇರ್ ವೀರಯ್ಯ ಚಿತ್ರದಲ್ಲಿ ಮಾಸ್ ಮಹಾರಾಜ ರವಿತೇಜ ಸಾಥ್ ನೀಡಿದ್ದರೆ, ವೀರಸಿಂಹಾರೆಡ್ಡಿಗೆ ಕನ್ನಡ ದುನಿಯಾ ವಿಜಯ್ ವಿಲನ್ ರೂಪದಲ್ಲಿ ಮುಖಾಮುಖಿಯಾಗಿದ್ದಾರೆ.

ವಾಲ್ತೇರ್ ವೀರಯ್ಯ ಮತ್ತು ವೀರಸಿಂಹಾರೆಡ್ಡಿ ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ತಾಣಗಳಲ್ಲಿ ಸಂಚಲವನ್ನುಂಟು ಮಾಡುತ್ತಿದೆ. ಪ್ರತಿಯೊಂದು ಹಾಡು ಪೈಪೋಟಿ ಮೇಲೆಯೇ ಬಿಡುಗಡೆಯಾಗಿ ಇಬ್ಬರೂ ನಟರ ಅಭಿಮಾನಿಗಳನ್ನು ರಂಜಿಸುತ್ತಿದೆ. ಚಿತ್ರಗಳ ಕುರಿತಂತೆ ಹಾಡುಗಳು ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಸಿದೆ.

ವೀರಸಿಂಹಾರೆಡ್ಡಿ ಬಾಸ್ ಆಫ್ ಮಾಸಸ್ ಬಾಲಕೃಷ್ಣರಿಗೆ ಹೊಂದುವಂತೆ ಮಾಸ್ ಆಕ್ಷನ್ ಚಿತ್ರವಾಗಿದ್ದು, ವಾಲ್ತೇರ್ ವೀರಯ್ಯ ಚಿರಂಜೀವಿಯ ಅಭಿಮಾನಿಗಳು ಬಯಸುವಂತೆ ಕಾಮಿಡಿ ಆಕ್ಷನ್ ಮಾಸ್ ಮಸಾಲಾ ಚಿತ್ರವಾಗಿ ರೂಪಿಸಲಾಗಿದೆಯೆಂದು ಹೇಳಲಾಗುತ್ತಿದೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಯಾವ ಚಿತ್ರಮಂದಿರಗಳಲ್ಲಿ ಯಾರ ಚಿತ್ರ ಬಿಡುಗಡೆಯಾಗುತ್ತದೆಯೆಂಬ ಕುತೂಹಲದಲ್ಲಿ ಲಕ್ಷಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನ ಟಿಕೆಟ್ ಕಾಯ್ದಿರಿಸಿ ಚಿತ್ರಮಂದಿರಗಳ ಮುಂದೆ ಹಬ್ಬದ ವಾತಾವರಣ ಸೃಷ್ಠಿಸಲು ಯೋಜನೆಗಳನ್ನು ರೂಪಿಸುತ್ತಿದ್ದಾರೆ.

ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಬಾಲಕೃಷ್ಣ ಮತ್ತು ಚಿರಂಜೀವಿ ಎರಡೂ ಚಿತ್ರಗಳು ಚೆನ್ನಾಗಿಯೇ ಪ್ರದರ್ಶನಗೊಳ್ಳಬೇಕೆಂದು ಹಾರೈಸಿದ್ದಾರೆ. ಆದರೆ, ಅಭಿಮಾನಿ ವರ್ಗ ತಮ್ಮ ನೆಚ್ಚಿನ ನಟನ ಚಿತ್ರವೇ ಬಾಕ್ಸ್ ಆಫೀಸ್‌ನಲ್ಲಿ ಮುಂದಿರಬೇಕೆಂದು ಹಾರೈಸುತ್ತಿದ್ದಾರೆ.

೨೦೨೩ರ ಸಂಕ್ರಾಂತಿ ಬಾಸ್ ಆಫ್ ಮಾಸ್ ನಂದಮೂರಿ ಬಾಲಕೃಷ್ಣ ಮತ್ತು ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳಿಗೆ ನೂರು ಪಟ್ಟು ಸಂಭ್ರಮವನ್ನು ತರುತ್ತಿದೆ. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಈ ಎರಡೂ ಚಿತ್ರಗಳು ಶತಕೋಟಿ ಆದಾಯಗಳಿಸಿ ದಾಖಲೆ ನಿರ್ಮಿಸಲಿ ಎಂಬುದು ನಮ್ಮಸುದ್ದಿಡಾಟ್‌ನೆಟ್ ಶುಭಾರೈಕೆ.
– ಕೆ.ಎಸ್.ಗಣೇಶ್

ಸುದ್ದಿ ಓದಿ, ಹಂಚಿ, ಪ್ರೋತ್ಸಾಹಿಸಿ

ಇದನ್ನೂ ಓದಿ: ಅಕ್ಷರಮಾತೆ  “ಸಾವಿತ್ರಿ ಬಾಯಿ ಪುಲೆ “

Related Post

ಬೆಂಗಳೂರಿನ ಪುಸ್ತಕ ಮನೆ ಕೋಲಾರ ಜಿಲ್ಲೆಗೆ ಸ್ಥಳಾಂತರ : ಓದುಗ ಪ್ರಿಯರಿಗೆ ಸಂತೋಷದ ವಿಷಯ
ಆದಿಮದಲ್ಲಿ ಸಾಂಸ್ಕೃತಿಕ ಯಾನ -200ರ ಅದ್ದೂರಿ ಚಾಲನೆಗೆ ಕ್ಷಣಗಣನೆ .
ಮೂಲಭೂತ ಸೌಲಭ್ಯಗಳಿಲ್ಲದೆ ಹಂದಿಗೂಡಂತಾದ ಕಾಲೇಜು ಹಾಸ್ಟೆಲ್.

Leave a Reply

Your email address will not be published. Required fields are marked *

You missed

error: Content is protected !!