PLACE YOUR AD HERE AT LOWEST PRICE
ಬಂಗಾರಪೇಟೆ:ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನಾನು ಕೆಲವು ಕಾರಣಗಳಿಂದ ಕಣದಿಂದ ಹಿಂದೆ ಸರಿದಿದ್ದಕ್ಕೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನನ್ನ ವಿರುದ್ದ ಸುಳ್ಳು ಅಪಪ್ರಚಾರ ಮಾಡಿ ರಾಜಕೀಯವಾಗಿ ತೇಜೋವಧೆ ಮಾಡುತ್ತಿದ್ದು ಅದನ್ನು ಸಾಬೀತುಪಡಿಸಬೇಕು ಎಂದು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ನೋಟೀಸ್ ನೀಡಿದ್ದಾರೆ.
ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ತಮ್ಮ ವಕೀಲರ ಮೂಲಕ ನೋಟೀಸ್ ನೀಡಿದ್ದು, ನೋಟೀಸಿನಲ್ಲಿ ಆರೋಪಗಳನ್ನು ಸಾಬೀತುಪಡಿಸಬೇಕು ಇಲ್ಲವಾದರೆ ಮಾಧ್ಯಮದ ಮುಂದೆ ಕ್ಷಮೆ ಕೇಳಬೇಕು ಮತ್ತು 2ಕೋಟಿ ಮಾನನಷ್ಟ ಪರಿಹಾರ ನೀಡಬೇಕೆಂದು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಶಾಸಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ವಿಧಾನಸಭೆ ಚುನಾವಣೆಯ ಮತದಾನದ ಹಿಂದಿನ ದಿನ ನಾನು ಜೆಡಿಎಸ್ ಅಭ್ಯರ್ಥಿ ಜೊತೆ ಶಾಮೀಲಾಗಿ ಕಣದಿಂದ ಹಿಂದೆ ಸರಿಯಲಾಗಿದೆ, ಅಲ್ಲದೆ ಜೆಡಿಎಸ್ ಅಭ್ಯರ್ಥಿ ಎಂ.ಮಲ್ಲೇಶಬಾಬು ಅವರ ಮಾವ ಮಂಜುನಾಥ್ ಪ್ರಸಾದ್ ಅವರ ಬಳಿ ಡೀಲ್ ಮಾಡಿಕೊಂಡು ಹಿಂದೆ ಸರಿಯಲಾಗಿದೆ,
ಇದು ಬಿಜೆಪಿ ಪಕ್ಷಕ್ಕೆ ಅವರು ಮಾಡಿರುವ ವಂಚನೆಯಾಗಿದೆ. ಪ್ರಧಾನಿ ಮೋದಿ ಬಂದು ಪ್ರಚಾರ ಮಾಡಿದರು ಅವರಿಗೆ ಗೌರವ ಕೊಡದೆ ಹಣಕ್ಕಾಗಿ ಜೆಡಿಎಸ್ ಜೊತೆ ಮಾರಿ ಹೋಗಿದ್ದಾರೆ ಎಂದೆಲ್ಲಾ ಇತ್ತೀಚಿಗೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಸುಳ್ಳು ಹೇಳುತ್ತಿದ್ದಾರೆ.
ಈ ಮೂಲಕ ಶಾಸಕರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಶಾಸಕರಿಗೆ ನಿಜಾಂಶ ತಿಳಿಯದೆ ಸುಳ್ಳು ಅಪಪ್ರಚಾರ ಮಾಡುವುದರಿಂದ ನನ್ನ ರಾಜಕೀಯ ಜೀವನಕ್ಕೆ ಧಕ್ಕೆಯುಂಟಾಗಿದೆ ಹಾಗೂ ರಾಜಕೀಯವಾಗಿ ತೇಜೋವಧೆ ಮಾಡಿದ್ದಾರೆ ಇದಕ್ಕೆ ತಕ್ಕ ಬೆಲೆ ತೆರಬೇಕು ಶಾಸಕರಿಗೆ ನೀಡಿರುವ ನೋಟಿಸ್ನಲ್ಲಿ ತಿಳಿಸಿದ್ದಾರೆ.